ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪುನೀತ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಸೋಶಿಯಲ್ ಮೀಡಿಯಾ ಮೂಲಕ ಪ್ರಾರ್ಥಿಸಿದ್ದರು. ಆದರೆ, ಈ ಪ್ರಾರ್ಥನೆ ಕೊನೆಗೂ ಇಡೇರಲೇ ಇಲ್ಲ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.
‘ಇವತ್ತು ಬೆಳಗ್ಗೆ 11:30ಕ್ಕೆ ಚೆಸ್ಟ್ ಪೆನ್ ಆಗಿ ಇಲ್ಲಿ ಬಂದಿದ್ದಾರೆ. ಬರುವಾಗ ಸ್ವಲ್ಪ ಸೀರಿಯಸ್ ಆಗಿತ್ತು. ಗಂಭೀರ ಹೃದಯಾಘಾತವಾಗಿದೆ. ಇನ್ನೂ, ಆರೋಗ್ಯ ಗಂಭೀರವಾಗಿದೆ. ಏನನ್ನೂ ಹೇಳೋಕೆ ಆಗಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ವೈದ್ಯರು ತಿಳಿಸಿದ್ದರು.
ಪುನೀತ್ ರಾಜ್ಕುಮಾರ್ ಮೃತಪಟ್ಟ ವಿಚಾರವನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ಮೃತಪಟ್ಟ ವಿಚಾರ ಅನೇಕರಿಗೆ ನಿಜಕ್ಕೂ ಶಾಕ್ ನೀಡಿದೆ. ಈಗ ಪುನೀತ್ ಸಾವಿನ ಸುದ್ದಿ ಕೇಳಿ ಅಭಿಮಾನಿಯೊಬ್ಬರು ಮೃತಪಟ್ಟ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ. ಹೃದಯಾಘಾತದಿಂದ ಮುನಿಯಪ್ಪ(30) ಎಂಬ ಅಭಿಮಾನಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ ಪುನೀತ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಪುನೀತ್ ಜತೆ ಅವರ ಅಭಿಮಾನಿಯೂ ಮೃತಪಟ್ಟಿದ್ದು ದುರದೃಷ್ಟಕರ.